ಇವರು ಬಡತನವನ್ನು ಮೆಟ್ಟಿನಿಂತು ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದವರು. ಬಡವರಿಗೆ, ದಲಿತರಿಗೆ ಹಾಗೂ ಮಹಿಳೆಯರಿಗೆ ತಮ್ಮ ಹಕ್ಕನ್ನು ದೊರಕಿಸಿ ಭಾರತದ ಸಂವಿಧಾನ ರಚಿಸಿದವರು. ಈ ಭವ್ಯ ಭಾರತಕ್ಕೆ ನವಚೈತನ್ಯವನ್ನು ನೀಡಿರುವವರು ಮಹಾನಾಯಕ ದಾದಾಸಾಹೇಬ್ ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್.
ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ 1891 ರ ಏಪ್ರಿಲ್ 14 ರಂದು ರಾಮ್ ಜಿ ಸಕ್ಪಲ್ ಹಾಗೂ ಭೀಮಾ ಬಾಯಿ ಸಕ್ಪಲ್ ಅವರ ಮಗನಾಗಿ ಜನಸಿದವರು ಅಂಬೇಡ್ಕರ್. ತಂದೆ ರಾಮ್ ಜಿ ಸಲ್ಪಲ್ ಬ್ರಿಟಿಷ್ ಸರ್ಕಾರದ ಸೈನ್ಯದಲ್ಲಿ ಸುಬೇದಾರ್ ಆಗಿದ್ದರೂ ಇವರ ಕುಟುಂಬವನ್ನು ಸಮಾಜ ನೋಡುತ್ತಿದ್ದ ರೀತಿಯೇ ಬೇರೆ. ಇವರ ಕುಟುಂಬ ಮರಾಠಿ ಹಿನ್ನೆಲೆ ಹೊಂದಿದ್ದು ಮಹಾರಾಷ್ಟ್ರದ ರತ್ನಗಿರಿ ಮೂಲದವರು. ಭೀಮರಾವ್ 6 ವರ್ಷದವನಾಗಿದ್ದಾಗ ಅವರ ತಾಯಿ ಚಿರನಿದ್ರೆಗೆ ಜಾರುತ್ತಾರೆ. ನಂತರ ಅಂಬೇಡ್ಕರ್, ತಾಯಿಯ ಮಮತೆಯನ್ನು ತನ್ನ ಅತ್ತೆಯಲ್ಲಿ ಕಂಡುಕೊಳ್ಳುತ್ತಾನೆ.
ದಲಿತರಿಗೆ ವಿದ್ಯಾಭ್ಯಾಸ ದೂರದ ಮಾತಾಗಿದ್ದ ದಿನಗಳವು. ಆದರೆ ಅಂಬೇಡ್ಕರ್ ಅವರಿಗೆ ಓದಬೇಕು ಎನ್ನುವ ಹಠ. ಆದ್ದರಿಂದ ಹೇಗೋ ಕಷ್ಟಪಟ್ಟು ಹತ್ತಿರದ ಶಾಲೆಯೊಂದಕ್ಕೆ ಸೇರಿಕೊಳ್ಳುತ್ತಾರೆ. ಅಸ್ಪೃಶ್ಯತೆಯ ಅನುಭವ ಅಂಬೇಡ್ಕರ್ಗೆ ಇಲ್ಲಿಂದ ಶುರುವಾಗುತ್ತದೆ. ಕುಡಿಯುವ ನೀರಿನಿಂದ ಹಿಡಿದು ನಡೆಯುವ ದಾರಿಯವರೆಗೂ ಎಲ್ಲವೂ ಹಾಗೂ ಎಲ್ಲರೂ ಅವರನ್ನು ಕಾಡುತ್ತಿದ್ದರು. ದಲಿತರಿಗೆ ಕುಡಿಯುವ ನೀರು ನೀಡಲೆಂದು ಶಾಲೆಯಲ್ಲಿ ಒಬ್ಬ ಕೆಲಸಗಾರನಿರುತ್ತಿದ್ದ. ಒಂದು ವೇಳೆ ಕೆಲವು ದಿನ ಅವನು ರಜೆ ಆದರೆ ಅಂಬೇಡ್ಕರ್ ಬಾಯಾರಿಕೆಯಲ್ಲೇ ದಿನ ಕಳೆಯಬೇಕಾಗಿತ್ತು!
ಆ ಬಾಲ್ಯ ಮನಸ್ಸಿಗೆ ಅವಮಾನ ಕಷ್ಟಗಳು ಹೊಸದಾಗಿದ್ದು ಆದ್ದರಿಂದ ಓದುವುದನ್ನು ನಿಲ್ಲಿಸಿ ಬಾಂಬೆಯ ಮಿಲ್ ಒಂದರಲ್ಲಿ ಕೆಲಸಕ್ಕೆ ಸೇರಬೇಕು ಎಂದು ನಿರ್ಧರಿಸುತ್ತಾರೆ. ಆದರೆ ಕೈಯಲ್ಲಿ ಹಣವಿರಲಿಲ್ಲ. ತಾನು ವಿದ್ಯಾಭ್ಯಾಸ ಪಡೆದರೆ ಮಾತ್ರ ಕುಟುಂಬದ, ದೇಶದ ಹಣೆಬರಹವನ್ನು ಬದಲಿಸಬಹುದು ಎಂದು ಅರಿತ ಅಂಬೇಡ್ಕರ್ 1897 ರಲ್ಲಿ ಎಲಿಸ್ಟನ್ ಸ್ಕೂಲಲ್ಲಿ ಪ್ರವೇಶವನ್ನು ಪಡೆದರು. ಆ ಶಾಲೆಗೆ ದಲಿತ ವಿದ್ಯಾರ್ಥಿಯೊಬ್ಬ ಕಾಲಿಟ್ಟಿದ್ದು ಅದೇ ಮೊದಲಾಗಿತ್ತು. ಅವರು 1907 ರಲ್ಲಿ ಹೈಸ್ಕೂಲ್ ಪಾಸ್ ಆಗುತ್ತಾರೆ. ದಲಿತ ಹುಡುಗನೊಬ್ಬ ಮೆಟ್ರಿಕ್ಯುಲೇಶನ್ ಪರೀಕ್ಷೆ ಪಾಸ್ ಮಾಡಿದ್ದು ಎಲ್ಲರೂ ಅಂಬೇಡ್ಕರ್ ಕಡೆ ತಿರುಗಿ ನೋಡುವಂತೆ ಮಾಡಿತ್ತು.
1912ರಲ್ಲಿ ಬಾಂಬೆ ಯುನಿವರ್ಸಿಟಿಯಲ್ಲಿ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರದಲ್ಲಿ ಡಿಗ್ರಿಯನ್ನು ಮುಗಿಸುತ್ತಾರೆ. ವಿದ್ಯಾರ್ಥಿವೇತನದ ಸಹಾಯ ಪಡೆದು ಅಂಬೇಡ್ಕರ್ ತನ್ನ 22ನೇ ವಯಸ್ಸಿನಲ್ಲಿ, 1913ರಲ್ಲಿ ಉನ್ನತ ವ್ಯಾಸಂಗ ಮಾಡಲೆಂದು ಅಮೆರಿಕಕ್ಕೆ ಹೊರಡುತ್ತಾರೆ. ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪದವಿ ಪಡೆದ ಅವರಿಗೆ 1916 ರಲ್ಲಿ “ಎವಲ್ಯೂಶನ್ ಆಫ್ ಪ್ರವನ್ಶಿಯಲ್ ಫೈನಾನ್ಸ್ ಇನ್ ಬ್ರಿಟಿಷ್ ಇಂಡಿಯಾ” ಎಂಬ ಸಂಶೋಧನೆ ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಲಾಗುತ್ತದೆ. ಅರ್ಥಶಾಸ್ತ್ರ ಮತ್ತು ಕಾನೂನು ಶಿಕ್ಷಣ ವನ್ನು ಲಂಡನ್ನಲ್ಲಿ ಪಡೆದರು. ಆದರೆ 1917 ರಲ್ಲಿ ವಿದ್ಯಾರ್ಥಿವೇ ಅಂತ್ಯವಾದ ಹಿನ್ನೆಲೆಯಲ್ಲಿ ತಮ್ಮ ಶಿಕ್ಷಣವನ್ನು ಅರ್ಧದಲ್ಲಿ ಬಿಟ್ಟು ಅಂಬೇಡ್ಕರ್ ಭಾರತಕ್ಕೆ ಬಂದರು.
ಭಾರತಕ್ಕೆ ಬಂದು ಕ್ಲರ್ಕ್ ನಂತಹ ಹಲವು ಕೆಲಸವನ್ನು ಮಾಡಿ ಹಣವನ್ನು ಒಟ್ಟುಗೂಡಿಸಿ ನಾಲ್ಕು ವರ್ಷದ ನಂತರ 1920 ರಲ್ಲಿ ಪುನಃ ಲಂಡನ್ ಗೆ ತೆರಳಿ ಶಿಕ್ಷಣವನ್ನು ಮುಂದುವರೆಸಿ 1923ರಲ್ಲಿ ತಮ್ಮ ಇನ್ನೊಂದು ಸಂಶೋಧನಾ ಪುಸ್ತಕ “ದಿ ಪ್ರಾಬ್ಲಮ್ ಆಫ್ ದಿ ರುಪೀ” ಯನ್ನು ಪ್ರಕಟಿಸುತ್ತಾರೆ. ಲಂಡನ್ ಯುನಿವರ್ಸಿಟಿ ಅಂಬೇಡ್ಕರ್ಗೆ “ಡಾಕ್ಟರ್ ಆಫ್ ಸೈನ್ಸ್” ಎಂಬ ಪದವಿ ನೀಡಿ ಗೌರವಿಸುತ್ತದೆ. ನಂತರ ಅದೇ ಪುಸ್ತಕದ ಆಧಾರದಲ್ಲಿ ಭಾರತದ “ರಿಸರ್ವ್ ಬ್ಯಾಂಕ್” ಸ್ಥಾಪನೆಯಾಯಿತು ಅನ್ನೋದನ್ನು ನಾವು ನೆನಪಿಸಿಕೊಳ್ಳಲೇಬೇಕು.
ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ಅಂಬೇಡ್ಕರ್ ಅವರಿಗೆ ಉನ್ನತ ಹುದ್ದೆ ದೊರೆಯುವುದು ಕಷ್ಟವೇನೂ ಆಗಿರಲಿಲ್ಲ. ಆದರೆ ಅವರಿಗೆ ತಮ್ಮ ದೇಶದಲ್ಲಿ ತಮ್ಮ ಸಮುದಾಯದ ಜನರು ಅನುಭವಿಸುತ್ತಿದ್ದ ನೋವು, ಕಷ್ಟಗಳ ಅರಿವಿದ್ದುದರಿಂದ ತಮ್ಮ ಸಂಪೂರ್ಣ ಜೀವನವನ್ನು ಭಾರತದಲ್ಲಿ ಕಳೆದು, ಸಮಾಜ ಸುಧಾರಣೆಗೆ ತಮ್ಮನ್ನು ಮುಡಿಪಾಗಿಟ್ಟರು. ಬಾಂಬೆಯಲ್ಲಿ ವಕೀಲೀ ವೃತ್ತಿ ಅಭ್ಯಾಸ ಮಾಡಿ ದಲಿತರಲ್ಲಿ ಶಿಕ್ಷಣದ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸಿದರು. 1927 ರಲ್ಲಿ ಅಸ್ಪೃಶ್ಯತೆಯ ವಿರುದ್ಧ ಚಳುವಳಿಯನ್ನೇ ಪ್ರಾರಂಭಿಸಿದರು. ಸಾರ್ವಜನಿಕ ಬಾವಿಗಳಲ್ಲಿ ನೀರು ಕುಡಿಯುವ ಹಾಗೂ ದೇವಸ್ಥಾನಕ್ಕೆ ಪ್ರವೇಶ ಮಾಡುವ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹಗಳನ್ನು ಮಾಡಿದರು.

ಮನುಸ್ಮೃತಿ ಯಲ್ಲಿರುವ ಜಾತೀಯತೆ ಮತ್ತು ಅಸ್ಪೃಶ್ಯತೆಯ ಅಂಶಗಳನ್ನು ಖಂಡಿಸಿ 1927ರಲ್ಲಿ ಸಾರ್ವಜನಿಕವಾಗಿ ಆ ಪುಸ್ತಕದ ಪ್ರತಿಯನ್ನು ಸುಟ್ಟು ಹಾಕಿದರು. ನಂತರ ಸಾವಿರಾರು ಅಂಬೇಡ್ಕರ್ ಬೆಂಬಲಿಗರು ಮನುಸ್ಮೃತಿ ಪುಸ್ತಕವನ್ನು 1927 ಡಿಸೆಂಬರ್ 25 ರಂದು ಸುಟ್ಟು ಹಾಕಿದರು. 1930 ರಲ್ಲಿ ಅಂಬೇಡ್ಕರ್ ಕಾಲರಾಮ್ ದೇಗುಲ ಚಳುವಳಿಯನ್ನು ಆರಂಭಿಸಿದರು. ಈ ಚಳುವಳಿಯಲ್ಲಿ ನಡೆದ ಮೆರವಣಿಗೆಯಲ್ಲಿ ಮಹಿಳೆಯರು ಪುರುಷರು ಸೇರಿದಂತೆ ಒಟ್ಟು 15 ಸಾವಿರ ಸ್ವಯಂಸೇವಕರು ಭಾಗವಹಿಸಿದ್ದರು.
ಅಂಬೇಡ್ಕರ್ ಮೊದಲಿಂದಲೂ ದಲಿತರಿಗೆ ಪ್ರತ್ಯೇಕ ಮತದಾನ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಪಾದಿಸುತ್ತಾ ಬಂದಿದ್ದರು. ಅದರಂತೆ 1932 ರಲ್ಲಿ ಬ್ರಿಟಿಷ್ ಸರಕಾರ ದಲಿತರಿಗೆ ಪ್ರತ್ಯೇಕ ಮತದಾನ ವ್ಯವಸ್ಥೆ ಜಾರಿಗೆ ತರಲು ಮುಂದಾಯಿತು. ಆದರೆ ಇದರಿಂದ ಹಿಂದೂ ಸಮಾಜ ಎರಡು ವಿಭಾಗಗಳಾಗಿ ವಿಂಗಡಣೆಯಾಗಬಹುದು ಎಂದು ಗಾಂಧೀಜಿಯವರು ಇದರ ವಿರುದ್ಧ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಬಿಟ್ಟರು. ಕಾಂಗ್ರೆಸ್ ನಾಯಕರಾದ ಮದನ್ ಮೋಹನ್ ಮಾಳವೀಯ ಮತ್ತು ಪಲ್ವಂಕರ್ ಬಾಲು ರವರು ಅಂಬೇಡ್ಕರ್ ಹಾಗೂ ಅವರ ಬೆಂಬಲಿಗರ ಜೊತೆ ಸಭೆ ನಡೆಸಿದರು “ಪೂನಾ ಒಪ್ಪಂದ” ದದ ಮೂಲಕ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವೊಂದು ಕ್ಷೇತ್ರಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿಡಲು ನಿರ್ಧರಿಸಲಾಯಿತು. ಇದರಿಂದ ಹಿಂದೂ ಧರ್ಮ ಎರಡು ಭಾಗ ಆಗುವುದು ತಪ್ಪಿತು.
ಸ್ವಾತಂತ್ರ್ಯ ಬಂದ ನಂತರ ಅಂಬೇಡ್ಕರ್ ಭಾರತದ ಮೊದಲ ಕಾನೂನು ಮಂತ್ರಿಯಾಗಿ ತಮ್ಮ ಆರೋಗ್ಯ ಸ್ಥಿತಿ ಸರಿ ಇರದೇ ಇದ್ದರೂ ಭಾರತಕ್ಕೆಂದು ಕಾನೂನಿನ ಚೌಕಟ್ಟನ್ನು ನಿರ್ಮಿಸಿದರು. ಅವರು ರಚಿಸಿದ ಸಂವಿಧಾನ 1950 ರ ಜನವರಿ 26 ರಂದು ಅಂಗೀಕಾರಗೊಂಡಿತು. ಆದರೆ ಜಮ್ಮು-ಕಾಶ್ಮೀರಕ್ಕೆ 370 ನೇ ವಿಧಿ ಮೂಲಕ ವಿಶೇಷ ಸ್ಥಾನ ಕಲ್ಪಿಸಲು ಅಂಬೇಡ್ಕರ್ ಭಾರಿ ವಿರೋಧ ವ್ಯಕ್ತಪಡಿಸಿದರು.
ಇವೆಲ್ಲವನ್ನು ಹೊರತುಪಡಿಸಿದರೆ ಅಂಬೇಡ್ಕರ್ ಅವರ ಜೀವನ ಬಹಳ ನೋವಿನಿಂದ ಕೂಡಿತ್ತು. ಅವರ ವೈಯಕ್ತಿಕ ಜೀವನ ದುರಂತವೇ ಆಗಿತ್ತು. ಅವರ ಪತ್ನಿ ರಮಾಬಾಯಿ 1935 ರಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ನಂತರ 1947 ರಲ್ಲಿ ಸವಿತಾ ಎನ್ನುವ ವೈದ್ಯೆಯೊಬ್ಬಳನ್ನು ರಿಜಿಸ್ಟರ್ ಮದುವೆಯಾಗುತ್ತಾರೆ.
ಅಂಬೇಡ್ಕರ್ ದೊಡ್ಡ ನಾಯಕ, ವಿದ್ಯಾವಂತ, ಬುದ್ಧಿವಂತ, ಸಂವಿಧಾನ ರಚಿಸಿದವರಾದರೂ ಅವರಿಗೆ ಸಿಗಬೇಕಾದ ಸ್ಥಾನಮಾನ ಸಿಗಲೇ ಇಲ್ಲ. 1952 ರ ಲೋಕಸಭಾ ಚುನಾವಣೆಯಲ್ಲಿ ಉತ್ತರದ ಬಾಂಬೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಆದರೂ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು. ಆದರೂ ಅಂಬೇಡ್ಕರ್ಗೆ ತೃಪ್ತಿ ಇರಲಿಲ್ಲ. ಹಾಗಾಗಿ 1954 ರ ಬಂಡಾರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅಲ್ಲಿಯೂ ಅವರು ಸೋತರು. ದೇಶಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡ ಅಂಬೇಡ್ಕರ್ಗೆ ಈ ಸೋಲುಗಳು ಪ್ರಶ್ನೆಗಳಾಗಿ ಕಾಡಿದವು.
ಚಿಕ್ಕವನಿಂದಲೂ ಮಾತೃ ಧರ್ಮದಲ್ಲಾದ ಅವಮಾನ , ನೋವಿನಿಂದಲೇನೋ ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದರು. “ದಿ ಬುದ್ಧ ಅಂಡ್ ಹಿಸ್ ಧಮ್ಮ” ಎನ್ನುವ ಪುಸ್ತಕವನ್ನು ಬರೆದು ಪ್ರಕಟಿಸಿದ ಮೂರೆ ದಿನಕ್ಕೆ ಅಂದರೆ 1956 ರ ಡಿಸೆಂಬರ್ 6 ನೇ ತಾರೀಕು ಅಂಬೇಡ್ಕರ್ ಚಿರನಿದ್ರೆಗೆ ಜಾರಿದರು. ಬೌದ್ಧ ಸಂಪ್ರದಾಯದ ಪ್ರಕಾರ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು.
ಅಂಬೇಡ್ಕರ್ ದೇಶದ ಸಮಾಜವನ್ನು ಬದಲಾಯಿಸುವುದರಲ್ಲಿ ಒಂದು ಹಂತಕ್ಕೆ ಯಶಸ್ವಿಯಾಗಿದ್ದಾರೆ. ತಾನು ತನ್ನ ಜೀವನವನ್ನು ಜೀವಿಸಿ ಬೇರೆಯವರು ಜೀವಿಸಲು ಮಾದರಿಯಾಗುವ ಕೆಲವೇ ಜನರಲ್ಲಿ ಅಂಬೇಡ್ಕರ್ ಮೊದಲಿಗರು ಎಂದರೆ ತಪ್ಪಾಗದು. ತಾನು ಕಣ್ಣೀರು ಸುರಿಸಿ ಮುಂದೆ ದಲಿತರ, ಮಹಿಳೆಯರ ಕಣ್ಣೀರು ಒರೆಸಿದ ಮಹಾನಾಯಕ ದಾದಾಸಾಹೇಬ್ ಡಾ. ಅಂಬೇಡ್ಕರ್ ಅವರ ಚಿಂತನೆಗಳ ಮೂಲಕ ಎಂದಿಗೂ ಜೀವಂತ.
ದರ್ಶನ್ ಕುಮಾರ್
ಪ್ರಥಮ ಬಿ.ಎ, ಪತ್ರಿಕೋದ್ಯಮ ವಿಭಾಗ
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
2 Comments
I was extremely pleased to discover this page. I want to to thank you for ones time due to this wonderful read!! I definitely appreciated every part of it and I have you bookmarked to look at new information on your web site.
yol85nkh