ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ವಿಚಾರಣಾ ಕೈದಿಗಳ ಹೊಡೆದಾಟದ ಬಳಿಕ ಜೈಲಿಗೆ ಪರಿಶೀಲನೆಗೆ ತೆರಳಿದ್ದ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹಾಗೂ ಜೈಲರ್, ಸಿಬ್ಬಂದಿ ಮೇಲೆ ಜೈಲಿನಲ್ಲಿದ್ದ ಕೈದಿಗಳ ತಂಡ ಮಾರಣಾಂತಿಕ ಹಲ್ಲೆಗೈದ ಆತಂಕಕಾರಿ ಘಟನೆ ನಡೆದಿದೆ.
ಜೈಲ್ನಲ್ಲಿ ಬೆಳಗ್ಗೆ ಉಪಹಾರ ವಿತರಣೆ ಸಂದರ್ಭ ವಿಚಾರಣಾಧೀನ ಕೈದಿ ಸಮೀರ್ ಎಂಬಾತ ವಿಚಾರಣಾಧೀನ ಕೈದಿಗಳಾದ ಅನ್ಸಾರ್ ಹಾಗೂ ಝೈನುದ್ದೀನ್ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭ ತಂಡಗಳ ಮಧ್ಯೆ ಮಾರಾಮಾರಿ ನಡೆದಿತ್ತು. ಇದು ನಗರ ಪೊಲೀಸರ ಗಮನಕ್ಕೆ ಬಂದಿದ್ದು, ಕೂಡಲೇ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್, ಬರ್ಕೆ ಠಾಣಾ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಟೀಮ್ ಜೈಲಿಗೆ ತೆರಳಿತ್ತು. ಪೊಲೀಸ್ ಕಮಿಷನರ್ ಮಫ್ತಿಯಲ್ಲೇ ಜೈಲಿಗೆ ತೆರಳಿದ್ದು, ಸೆಲ್ನ ಒಳಗೆ ಹೋಗಿ ಆರೋಪಿ ಸಮೀರ್ನನ್ನು ಪ್ರಶ್ನಿಸಿದ್ದಾರೆ.
ಈ ವೇಳೆ ಆರೋಪಿ ಸೇರಿದಂತೆ ಸುಮಾರು 15ಕ್ಕೂ ಅಧಿಕ ಮಂದಿಯ ತಂಡ ಏಕಾಏಕಿ ಮಾರಕಾಯುಧದಿಂದ ಪೊಲೀಸ್ ಕಮಿಷನರ್, ಜೈಲರ್ ಸೇರಿದಂತೆ ಮೂರು ಮಂದಿಯ ಮೇಲೆ ಹಲ್ಲೆ ನಡೆಸಿದೆ. ಏಕಾಏಕಿ ದಾಳಿಯಿಂದ ಆತಂಕಿತರಾದ ಅಧಿಕಾರಿಗಳು, ಪೊಲೀಸರು ಸೆಲ್ನಿಂದ ಹೊರಗೆ ಬಂದಿದ್ದಾರೆ. ಗಂಭೀರ ಹಲ್ಲೆಯಿಂದ ಪೊಲೀಸ್ ಕಮಿಷನರ್ ಅವರ ಮೂಗಿನಿಂದ ರಕ್ತ ಬಂದಿದ್ದು, ಅಂಗಿಯಲ್ಲೂ ರಕ್ತವಾಗಿತ್ತು.
ಹಲ್ಲೆಗೊಳಗಾದ ಕಮಿಷನರ್ ಶಶಿಕುಮಾರ್ ಕೂಡಲೇ ಸಿಬ್ಬಂದಿ ಮೂಲಕ ತನ್ನ ಯೂನಿಫಾರ್ಮ್ ತರಿಸಿದರು. ಬಳಿಕ ಜೈಲ್ ಸೂಪರಿಂಡೆಂಟ್ ಕಚೇರಿಗೆ ತೆರಳಿ ಮುಖ ತೊಳೆದು ಸಮವಸ್ತ್ರವನ್ನು ಹಾಕಿ ಹೊರಬಂದಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಜೈಲರ್ ಚಂದನ್ ಪಾಟೀಲ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಾಗೃಹದಲ್ಲಿ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿ ಒಟ್ಟು 5 ಪ್ರಕರಣ ದಾಖಲಾಗಿದೆ. ಸಮೀರ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಕೇಳಿದ್ದರೂ ನ್ಯಾಯಾಲಯ ಮಾತ್ರ ನ್ಯಾಯಾಂಗ ಬಂಧನ ವಿಧಿಸಿದೆ. ಸಮೀರ್ ಮತ್ತು ಇತರ 20 ಮಂದಿ ಕೈದಿಗಳನ್ನು ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ಕಾರಾಗೃಹದಲ್ಲಿ ಯಾವ ಕಾರಣಕ್ಕೆ ಹಲ್ಲೆ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ.
ವಿಚಾರಣಾಧೀನ ಕೈದಿಗಳ ಮೇಲೆ ಭಾನುವಾರ ಬೆಳಗ್ಗೆ ಹೊಡೆದಾಟ ನಡೆದಿದ್ದು, ಪೊಲೀಸರು ಜೈಲಿಗೆ ಆಗಮಿಸುವ ಮೊದಲೇ ಆರೋಪಿಗಳು ಹಲ್ಲೆಗೆ ಪೂರ್ವ ಸಿದ್ಧತೆ ಮಾಡಿದ್ದರು. ಕಮಿಷನರ್, ಜೈಲರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಬಳಸಿದ ವಸ್ತುಗಳಿಂದ ಇದು ಸಾಬೀತಾಗಿದೆ. ನೀರಿನ ತಂಬಿಗೆಗೆ ಅನ್ನ ಹಾಗೂ ಭಾರದ ಸೊತ್ತುಗಳನ್ನು ತುಂಬಿ, ಅದನ್ನು ಬೈರಾಸಿನಿಂದ ಆರೋಪಿಗಳು ಸುತ್ತಿದ್ದರು. ಇದನ್ನೇ ಬಳಸಿಕೊಂಡು ಕಮಿಷನರ್, ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ.
ಜಿಲ್ಲಾ ಕಾರಾಗೃಹದೊಳಗೆ ಭಾನುವಾರ ನಡೆದ ದಾಳಿಗೆ ವಿಚಾರಣಾಧೀನ ಕೈದಿಗಳು ಮಾರಕಾಸ್ತ್ರಗಳನ್ನು ತಯಾರು ಮಾಡಿಟ್ಟುಕೊಂಡಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ನಮ್ಮ ತಂಡ ಕಾರಾಗೃಹಕ್ಕೆ ಭೇಟಿ ನೀಡಿದಾಗ ಹಳೆಯ ಕೇರಂ ಬೋರ್ಡ್ನ ಫ್ರೆಮ್ನ್ನು ಹರಿತವಾದ ಆಯುಧವನ್ನಾಗಿ ಮಾಡಿ ಅದನ್ನು ಚೂರಿ ರೀತಿಯಲ್ಲಿ ಬಳಸಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಟ್ಯೂಬ್ಲೈಟ್ ಪುಡಿಗಳನ್ನು ಶೇಖರಿಸಿ ಅದನ್ನು ಬಟ್ಟೆಯೊಳಗಿರಿಸಿ ಅದರಿಂದ ದಾಳಿ ಮಾಡಲು ತಂತ್ರಗಾರಿಕೆ ರೂಪಿಸಿರುವುದು ಕೂಡ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಜೈಲಿನಲ್ಲಿ ನಡೆದ ದಾಂಧಲೆ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸುದ್ದಿಯಾಗುತ್ತಿದ್ದಂತೆ ರಾಜ್ಯ ಕಾನೂನು ಸುವ್ಯವಸ್ಥಾ ವಿಭಾಗದ ಎಡಿಜಿಪಿ ಮತ್ತು ರಾಜ್ಯ ಬಂಧೀಖಾನೆ ವಿಭಾಗದ ಎಡಿಜಿಪಿಯವರು ಘಟನೆಯ ವರದಿ ಕೇಳಿದ್ದಾರೆ. ಇದು ಮಾತ್ರವಲ್ಲದೆ ಕಮಿಷನರ್ ಅವರಿಗೆ ಮಾನವ ಹಕ್ಕು ಆಯೋಗದ ಸದಸ್ಯರು ಕರೆ ಮಾಡಿ ಘಟನೆಯ ವಿವರ ಕೇಳಿದ್ದಾರೆ.
1 Comment
Pingback: joe rogan keto diet